ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೊಂದಿದ್ದ ಪಡುಕೋಣೆ ಸೀತಾದೇವಿಯವರು, ತಮ್ಮ ಸ್ವಸಾಮರ್ಥ್ಯದಿಂದ, ಇಂಗ್ಲೀಷ್, ಕನ್ನಡ ಭಾಷೆಗಳನ್ನು ಕಲಿತು, ಕನ್ನಡದಲ್ಲಿ ಅವನ್ನು ಅತ್ಯುತ್ತಮವಾಗಿ ಅನುವಾದಿಸಿ, ತಾವೇ ರಚಿಸಿದ ಹಲವು ಕೃತಿಗಳನ್ನು ಅನುವಾದಿಸಿ, ಪ್ರಕಟಿಸಿ ಒಂದು ಇತಿಹಾಸವನ್ನು ಸೃಷ್ಟಿಸಿದ ಧೀಮಂತ ಮಹಿಳೆ. ತೀರ ಮಡಿವಂತ ಸಮಾಜದಿಂದ ಮೇಲೆ ಬಂದ ಸೀತಾದೇವಿಯವರು, ತಮ್ಮ ಪತಿ, ಪಡುಕೋಣೆ ರಮಾನಂದರಾಯರು, ಜೊತೆಯಲ್ಲಿ ನಾಯಕಿಯಾಗಿ ಒಂದು ನಾಟಕದಲ್ಲೂ ಅಭಿನಯಿಸಿ, ಅಂದಿನ ದಿನಗಳಲ್ಲಿ ಸುದ್ದಿಯಲ್ಲಿದ್ದು, ಬಹುಚರ್ಚಿತರಾಗಿದ್ದರು ಸಹಿತ. == ಜನನ, ಮದುವೆ == ಸೀತಾದೇವಿಯವರು, ದ. ಕನ್ನಡ ಜಿಲ್ಲೆಯ ಪುತ್ತೂರಿ ನಲ್ಲಿ ೧೯೦೩ , ಜೂನ್, ೫ ರಂದು ಜನಿಸಿದರು. ಅವರ ತಂದೆ, ದೇಶಭಕ್ತ ಮೊಳಹಳ್ಳಿ ಶಿವರಾವ್, ವೃತ್ತಿಯಿಂದ ವಕೀಲರು ಶಿಕ್ಷಣ ಕ್ಷೇತ್ರದಲ್ಲೂ ಸಕ್ರಿಯವಾಗಿ ದುಡಿದವರು ತಾಯಿ, ಉಮಾದೇವಿ. ಬಾಲೆ ಸೀತಾ, ಮಾಧ್ಯಮಿಕ ಶಾಲೆಯ ಮೆಟ್ಟಿಲು ಹತ್ತಿದ್ದರು. ಆಗ ಇಂಟರ್ ಮೀಡಿಯೇಟ್ ಓದುತ್ತಿದ್ದ ಪಡುಕೋಣೆ ರಮಾನಂದರಾಯರು ರನ್ನು ನೋಡಿದ್ದರು. ಶಾಲೆಯಲ್ಲಿ ಓದುತ್ತಿದ್ದ, ಸೀತಾದೇವಿಯವರನ್ನು ಕಂಡ ರಮಾನಂದರು ಮೋಹಿತರಾಗಿ ಅವರನ್ನು ಮದುವೆಯಾದರು. ಪತಿಯ ಪ್ರೋತ್ಸಾಹದಿಂದ ಕನ್ನಡ, ಇಂಗ್ಲೀಷ್ ಭಾಷೆಗಳ ಸಾಹಿತ್ಯಗಳಲ್ಲಿ ಕೃಷಿಮಾಡಿ, ಇಂಗ್ಲಿಷ್, ಮಾರಾಠಿ, ಹಿಂದಿ ಭಾಷೆಗಳ ಕೃತಿಗಳನ್ನು ಅರ್ಥಮಾಡಿಕೊಳ್ಳು ವುದಲ್ಲದೆ ಅನುವಾದ ಮಾಡುವಷ್ಟು ಪ್ರಗತಿ ಸಾಧಿಸಿದರು. ಪಡುಕೋಣೆ ರಮಾನಂದರ ಮನೆ ಅತಿಥಿಗಳ ತಾಣವೆನಿಸಿತ್ತು. ಮೈಸೂರಿನ ಎಲ್ಲಾ ಪ್ರಖ್ಯಾತ ಲೇಖರೂ ಅವರ ಮನೆಗೆ ಬಂದು ರಾಯರನ್ನು ಭೇಟಿಮಾಡಿಹೋಗುತ್ತಿದ್ದರು. ಸಾಹಿತ್ಯದ ಸಾಧನೆಗೆ ಧಾರಳವಾಗಿ ಸಹಾಯಕರಾಗಿ ನಿಲ್ಲುತ್ತಿದ್ದ, ರಮಾನಂದ ದಂಪತಿಗಳು ಆಗಿನ ಕಾಲದ ಬಹು ಜನಪ್ರಿಯ ವ್ಯಕ್ತಿಯಾಗಿದ್ದರು. == ಪತಿಯ ಹೆಚ್ಚಿನ ವಿದ್ಯಾಭ್ಯಾಸ, ಮದುವೆಯ ಬಳಿಕ == ಪಡುಕೋಣೆ ರಮಾನಂದರು ತಮ್ಮ ವಿವಾಹದ ನಂತರ, ಮದರಾಸಿನ ಪ್ರೆಸಿಡೆನ್ಸಿ ಕಾಲೇಜ್ ನಲ್ಲಿ ಬಿ.ಎ ; ಎಮ್.ಎ; ಎಲ್.ಟಿ, ಪದವಿಗಳನ್ನು ಪಡೆದು, ರಾಜಮಾಂಡ್ರಿ, ಕಾಲೇಜಿನಲ್ಲಿ ರಸಾಯನ ಶಾಸ್ತ್ರವಿಭಾಗದ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಆ ಸಮಯದಲ್ಲಿ ತಮ್ಮ ಪತ್ನಿಯವರಿಗೆ ಕಾಲೇಜಿನ ಲೈಬ್ರರಿಯಿಂದ ಇಂಗ್ಲೀಷ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಸಾಹಿತ್ಯದ ಬಗ್ಗೆ ಪತ್ನಿಯವರಿಗೆ ವಿವರಿಸುತ್ತಿದ್ದರು. ಈ ದಂಪತಿಗಳಿಗೆ ೫ ಜನ ಮಕ್ಕಳು. ಚಂದ್ರಭಾಗಾ ದೇವಿ, (ಭರತನಾಟ್ಯ ಕಲೆಯಲ್ಲಿ ಪ್ರಸಿದ್ಧರು) ಪ್ರಭಾಶಂಕರ (ಇಂಜಿನಿಯರ್) ಶಾಂತಿ (ಚಿತ್ರಕಲೆಯಲ್ಲಿ ಹೆಸರು ಗಳಿಸಿದರು) ಜಯವಂತಿ ದೇವಿ ಹಿರೇಬೆಟ್ (ಜಯವಂತಿ,ಹಿಂದುಸ್ತಾನಿ ಸಂಗೀತದಲ್ಲಿ ಪ್ರಸಿದ್ಧರು) ಯಶೋಧರ (ಸಂಗೀತ, ನೃತ್ಯ,) ರಮಾನಂದ ರಾಯರಿಗೆ ಮಂಗಳೂರಿಗೆ ವರ್ಗವಾದಾಗ, ಸಾಹಿತ್ಯದ ಬಗ್ಗೆ ಹೆಚ್ಚು ಹೆಚ್ಚು ಚಟುವಟಿಕೆಗಳನ್ನು ಹಮ್ಮಿಕೊಂಡರು. ಸಾಹಿತಿಗಳು ಮನೆಗೆ ಬರುತ್ತಿದ್ದರು ಜಿ.ಪಿ ರಾಜರತ್ನಂ ೪ ತಿಂಗಳು ಅವರ ಮನೆಯಲ್ಲಿ ಅತಿಥಿಯಾಗಿದ್ದು, 'ಬೌಧ್ಧ ಧರ್ಮ' ಎಂಬ ಗ್ರಂಥವನ್ನು ರಚಿಸಿದರು ಕೃತಿ ರಚನೆಯ ಬಳಿಕ, ರಾಜರತ್ನಂ, ‘ಒಂದು ಕುರುಕ್ಷೇತ್ರ ಮಾಡಿ ಗೆದ್ದ ಅನುಭವ’ ಎಂದು ಉದ್ಗರಿಸಿದರಂತೆ. ಹೀಗೆ ಇವರ ಮನೆ ಸಾಹಿತಿಗಳಿಗೆ ಸದಾ ತೆರೆದಿರುತ್ತಿತ್ತು. ಸದಾಕಾಲ ಸಾಹಿತಿಗಳ ಸಂಗದಿಂದ ಲೇಖಕ ರಮಾನಂದರಾಯರ ಪ್ರೋತ್ಸಾಹದಿಂದ ತಾವೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು 'ಸೀತಾದೇವಿ'ಯವರು, ಹಿಂದಿ, ಕೊಂಕಣಿ, ಕನ್ನಡದಲ್ಲಿ ಕೃತಿಗಳನ್ನು ರಚಿಸತೊಡಗಿದರು. == ಸೀತಾರವರ ಕೃತಿಗಳು == ‘ಹೀಗಾಗಬೇಕೆ!’ ಮೊದಲ ಕೃತಿ, ೧೯೨೯ ರಲ್ಲಿ ಪ್ರಕಟವಾಯಿತು. ಜಾಯಿ-ಜೋಯಿ ಕಿರು ಕಾದಂಬರಿ. ೧೯೨೯ ರಲ್ಲಿ ‘ಕಟುಕ ರೋಹಿಣಿ ಸಂವತ್ಸರದಲ್ಲಿ!’ ( ಎಂಬ ಚಲನಚಿತ್ರದಿಂದ ಪ್ರೇರಿತರಾಗಿ) ಪ್ರಕಟವಾದ ಚಿಕ್ಕ ಪ್ರಹಸನ . ಈ ಕಿರು ಪ್ರಹಸನ ಕಡೆಂ ಗೋಡ್ಲು ಶಂಕರ ಭಟ್ಟರು, ತಮ್ಮ ರಾಷ್ಟ್ರ ಬಂಧು ಸಾಹಿತ್ಯ ಸಂಚಿಕೆಯಲ್ಲಿ ಪ್ರಕಟಮಾಡಿದರು. ಶಿವರಾಮ ಕಾರಂತರು, ತಮ್ಮ ವಸಂತ ಪುಷ್ಪಮಾಲೆಯ ಸಾಹಿತ್ಯ ಸಂಚಿಕೆಯಲ್ಲಿ ಇದನ್ನು ಪ್ರಕಟಿಸಿದರು. ಈ ಏಕಾಂಕ ನಾಟಕ, ಕೊಂಕಣಿ ಭಾಷೆಗೆ ಅನುವಾದವಾಗಿ, ಮುಂಬಯಿ ಆಕಾಶವಾಣಿಯಲ್ಲಿ ಪ್ರಸಾರವಾಯಿತು. ‘ಮೇರೆ ಗೋಪಾಲ್’ ವಿ. ಸೀತಾರಾಮಯ್ಯನವರ ‘ಸೊಹ್ರಾಬ್-ರುಸ್ತುಂ’ ನಾಟಕವನ್ನು ಹಿಂದಿಗೆ ಅನುವಾದಿಸಿದರು. ‘ವಧು ಪರೀಕ್ಷೆ’, ಕೊಂಕಣಿ ಭಾಷೆಯಲ್ಲಿ ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ ನಾಟಕ ‘ಕುಟ್ಟು ಮಕ್ಕಾರಿ ಫಜೀತಿ’ ಎಂಬ ಇನ್ನೊಂದು ನಾಟಕವನ್ನು ಕೊಂಕಣಿಯಲ್ಲಿ ರಚಿಸಿದ್ದಾರೆ. ಈ ನಾಟಕವನ್ನು ಮದರಾಸಿನಲ್ಲಿ ರಂಗದ ಮೇಲೆ ತಂದಾಗ ‘ಕುಟ್ಟು ಮಣ್ಣ’ ಎಂಬ ಪಾತ್ರಧಾರಿಯಾಗಿಯೂ ರಂಗದ ಮೇಲೆ ಬಂದಿದ್ದರು. ‘ಕದನ-ಕುತೂಹಲ’ ಎಂಬ ನಾಟಕವನ್ನು ‘ಲಡಾಯಿ ಮೂಳ’ ಎಂದುಭಾಷಾಂತರಿಸಿದರು. ಕೈಲಾಸಂರವರ 'ಹೋಂ ರೂಲ್' ನಾಟಕವನ್ನು ಅದೇ ಹೆಸರಿನಿಂದ ಕೊಂಕಣಿ ಭಾಷೆಗೆ ಅನುವಾದಿಸಿದ್ದಾರೆ. ಸೀತಾದೇಯವರು ರಚಿಸಿದ 'ನಾಲ್ಕು ಅಂಗಳ' ಮತ್ತೊಂದು ನಾಟಕ ‘ವೇಣುಮಾಮ’, ೧೯೪೯ರಲ್ಲಿ ಪ್ರಕಟವಾಯಿತು. ಇದು ಅಂಟನ್ ಚೆಕಾಫ್‌ರ ಅಂಕಲ್ ವಾನ್ಯಾ ( ) ಎಂಬ ನಾಟಕದ ರೂಪಾಂತರ. ಈ ನಾಟಕದ ಕೊಂಕಣಿ ಅನುವಾದ, ೧೯೬೧ ರಲ್ಲಿ, ಮುಂಬಯಿನಲ್ಲಿ ಜರುಗಿದ ನಾಟಕೋತ್ಸವದಲ್ಲಿ ಪ್ರದರ್ಶಿತವಾಯಿತು. == ಒಬ್ಬ ಹೆಸರಾಂತ, ಸಾಧಕಿ == ಮಡಿವಂತಿಕೆಯ ಕೊಂಕಣಿ ಸಮಾಜದಲ್ಲಿ, ಸ್ತ್ರೀಯೊಬ್ಬಳು ನಾಟಕಗಳನ್ನು ರಚನೆ ಮಾಡಿ, ಪತಿಯ ಜೊತೆ ಅಭಿನಯಿಸಿದ, ಪ್ರಗತಿಪರ ದೃಷ್ಟಿಕೋನದ ದಿಟ್ಟ ಮಹಿಳೆ. ಸ್ವತಂತ್ರವಾಗಿ ನಾಟಕ ರಚಿಸಿದ, ಕತೆ, ಪ್ರಹಸನ, ನಾಟಕಗಳನ್ನು ಮರಾಠಿಯಿಂದ ಕನ್ನಡ-ಕೊಂಕಣಿ ಭಾಷೆಗೆ ಯಶಸ್ವಿಯಾಗಿ ತರ್ಜುಮೆಮಾಡಿ ಹೆಸರುಮಾಡಿದ ಪ್ರತಿಭಾನ್ವಿತೆ. == ನಿಧನ == ಕ್ಷಯರೋಗ ಪೀಡಿತರಾಗಿ, ಕ್ರಮೇಣ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸೀತಾದೇವಿಯವರು, ೧೯೬೯ ಡಿಸೆಂಬರ್, ೧೧ ರಂದು ದೈವವಶರಾದರು.